ಮುಂಗಾರು -20

 ಮುಂಗಾರು -20

ಮೂರು ವರ್ಷಗಳ ಹಿಂದೆ ಕೊಡಗಿನಲ್ಲಿ ಭಾರೀ ಮಳೆಗೆ  ಭೂಕುಸಿತ ಉಂಟಾಗಿ ಆದ ಅನಾಹುತ ಅಷ್ಟಿಷ್ಟಲ್ಲ. ಆ ಸಂದರ್ಭದಲ್ಲಿ ಬರೆದದ್ದು. 

ನಿನ್ನೆಬಿದ್ದ ಕುಂಭದ್ರೋಣ ಮಳೆ ನೋಡಿ ಈ ಕವನ ನೆನಪಾಯ್ತು. 


ಮುನಿದರೆ ಪ್ರಕೃತಿ ನೀನ್ಯಾವ ಲೆಕ್ಕವೊ? 


ಮುನಿದರೆ ಪ್ರಕೃತಿ 

ಮೇಘಸ್ಫೋಟ ಕುಂಭದ್ರೋಣ ಮಳೆ 

 ನೀನ್ಯಾವ ಲೆಕ್ಕಾನೋ ಮನುಜ? 

ಮಾಡಿದ್ದುಣ್ಣೋ ಮಾರಾಯ 

ಆಗುವುದೆಲ್ಲ ಆಗಿಹೋಗಿದೆ 


ಹಿಂದೆ ಅಲ್ಲಿತ್ತು  ಹರಿದ್ವರ್ಣ 

ಗುಡ್ಡದ ನೆತ್ತಿವರೆಗೂ 

ಒತ್ತು ಒತ್ತಾಗಿದ್ದ ವಿಪಿನ 

ಎಲ್ಲಾ ಸವರಿ ಸಂಹರಿಸಿ 

 ಐಶಾರಾಮಿ ಬಂಗಲೆಎಬ್ಬಿಸಿದೆ 

ಹೆಸರು ಅಭಿವೃದ್ಧಿ 

ದುರಾಸೆ, ದುರಹಂಕಾರ 

ಹಣದ ಮದ ಆದದ್ದೇನೋ? 


ನದಿಗಳುಕ್ಕಿ ಸೊಕ್ಕೇರಿ ಹರಿದಿವೆ 

ಎತ್ತರೆತ್ತರ ಗಿರಿ ಕಾನನಗಳು 

ಉಸ್ಸೆಂದು ಕುಸಿದು ಬಯಲಾಗಿವೆ 

ಜನ ಜಾನುವಾರುಗಳು 

ಕಾಲನ ದವಡೆಗೆ ಸಿಕ್ಕು 

ಬದುಕು ಕೊಚ್ಚಿ ಹೋಗಿದೆ 

ಜಲ ಮೂಲ ಮುಚ್ಚಿ ಹೋಗಿದೆ 


ಕಟ್ಟಿಕೊಂಡ ಬದುಕು 

ನೆಮ್ಮದಿ ವೈಭೋಗ 

ಭೂತಕಾಲಕ್ಕೆ ಜರ್ರನೇ 

ಸರಿದು ಹೋಗಿವೆ 

ನೆತ್ತಿಗೇರಿದ್ದು ಇಳಿಯಿತೇನೋ? 

ಎಲ್ಲಾ ಕಳೆದುಕೊಂಡಮೇಲಾದ್ರು 


ನೊಂದು ನಲುಗಿದವರ

 ಕಣ್ಣೀರಿನೊರತೆ ಬತ್ತಿ ಹೋಗಿದೆ 

ಮೌನ ಹತಾಶೆ ಮಡುಗಟ್ಟಿದೆ 

 ಜರ್ಜರಿತ ಆರ್ದ್ರ ನೋಟ 

ಪ್ರಕೃತಿಯ ಮುನಿಸಿಗೆ 

ಬೆಚ್ಚಿ ಕಂಗಾಲಾದವರ 

 ಒಕ್ಕೊರಲಿನ  ಆರ್ತನಾದ 

ನಮಗಾಗಿ ಪ್ರಾರ್ಥಿಸಿ 

ನಮ್ಮ ಬದುಕನ್ನುಳಿಸಿ

ಸಂಕಟಕಾಲಕ್ಕೆ ಸರ್ವಶಕ್ತನೇ 

ಬೇಕಾಯಿತೇನೋ? 


……..ರಾಜೀವ ಅಜ್ಜೀಬಳ

Comments

Popular posts from this blog

ವಿನಾಶ ಕಾಲೇ

Message to love in nature