ಕರುಣಿಸು ಮುಗಿಲೇ ಮಾಗಿಯ
ಇಳೆಗಿಳಿಸೇ ಮುಗಿಲೇ ಮಾಗಿಯ
ನೆನೆ ನೆನೆದು ಭುವಿ ಅದ್ದಿ ಒದ್ದೆಯಾಗಿದೆ
ಸೇರಿದೆ ಕೊಯ್ದ ತೆನೆ ರಾಶಿ ನೀರಡಿಗೆ
ಮಣ್ಣ ಕುವರನ ಕಣ್ಣು ಕೊಳವಾಗಿದೆ
ಹಿಂಗಾರುಸೋನೆ ಕಣ್ಣೀರಾಗಿದೆ
ಉದುರಡಿಕೆ ತೇಲಿ ಹೋಗಿದೆ
ಸೊರಗಿದೆ ಬಳ್ಳಿ ಮೆಣಸು ಹೆದರಿದೆ
ಸುರಿಯೇ ಮಾಗಿಯ ಮುಗಿಲೇ
ಪೂಗ ಗೊನೆ ಮರ ನೆಲವನಪ್ಪಿದೆ
ಕದಳಿಯ ಬುಡ ಮೇಲಾಗಿದೆ
ಕೊಚ್ಚಿಹೋಗಿದೆ ನೀರುಕ್ಕಿ ಗೊಬ್ಬರ
ಕಳಿಸಿತ್ತ ತ್ವರಿತ ಮಾಗಿಯ ಮುಗಿಲೇ
ಮಾಗಿಯ ಚಳಿಗೆ ಹಂಬಲಿಸಿದೆ ಮನ
ಮೈಗೆ ಬಿಗಿ ಬೆಚ್ಚನ ಉಡುಪು
ಹೊಡಸಲು ಗಡ ಗಡ ನಡುಕಕೆ
ಸುಮಧುರ ಕನಸಿನರಮನೆಗೆ
ಏಕೆ ಬಂಧಿಸಿಹೆ ಹೇಳೇ ಚಳಿಯ
ಕಳಿಸೇ ಮುಗಿಲೇ ಮಾಗಿಯ
ಮಾಗಿಯಿಲ್ಲದೆ ಉಂಟೇ ಸಂಭ್ರಮ
ಒಣಗದ ಕಣಕೆ ಬಾರದು ಧಾನ್ಯ
ತುಂಬದು ರೈತರ ಹಿಗ್ಗಿನ ಕಣಜ
ಏನೋ ಕರಾಬು ಕರಾಮತಿ ಮೇಲೆ
ಮುಗ್ಗಿದೆ ಬದುಕು ಭೂಮಿಯ ಮೇಗಡೆ
ಅರಿವಿಗೆ ಬಾರದು ಈ ಕಾಲಮಹಿಮೆ
ಕರುಣಿಸು ಬೇಗ ರವಿದರ್ಶನ ನಾಡಿಗೆ
ಮಾಗಿಯ ಬಂಧನ ಬಿಡಿಸೇ ಮುಗಿಲೇ
……..ರಾಜೀವ ಅಜ್ಜೀಬಳ
Comments
Post a Comment